ಕವನ | ಕೆ.ಎಸ್. ನರಸಿಂಹಸ್ವಾಮಿ | ಮೈಸೂರು ಮಲ್ಲಿಗೆ
ತಿಂಗಳಾಯಿತೆ?
-ಕೆ. ಎಸ್.ನರಸಿಂಹಸ್ವಾಮಿ
(ಕವನ ಸಂಕಲನ - ಮೈಸೂರು ಮಲ್ಲಿಗೆ )
ಪಯಣಿಸುವ ವೇಳೆಯಲಿ ಬಂದು ಅಡಿಗೆರಗಿ
ಮುಂದೆ ನಿಂದಳು ನನ್ನ ಕೈಹಿಡಿದ ಹುಡುಗಿ.
ಇನ್ನೆಂದು ಬರುವಿರೆಂದೆನ್ನ ಕೇಳಿದಳು;
ಇನ್ನೊದು ತಿಂಗಳಿಗೆ ಎಂದು ಹೇಳಿದೆನು.
ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ,
ಕಣ್ಣಿರಲು ತಿಳಿಬಾನ ಕಿರುತಾರೆಯಂತೆ,
ವೇಣಿಯಿರಲು ವಸಂತ ಪುಷ್ಪವನದಂತೆ,
ಮನಸು ಬಾರದು ಎನಗೆ ಅಡಿಯನಿಡೆ ಮುಂದೆ.
ಅಲ್ಲಲ್ಲಿ ನಿಂದವಳ ನೋಡುತಡಿಗಡಿಗೆ
ತೆರಳಿದೆನು ವಿರಹದಲಿ ನಿಲ್ದಾಣದೆಡೆಗೆ-
ದಾರಿಯಲೆ ಕಂಡೊಬ್ಬ ಹಣ್ಣು ಮಾರುವನು
ಹೊರಟು ಹೋದುದು ಬಂಡಿ ಎಂದು ಹೇಳಿದನು.
ಹಿಂತಿರುಗಿ ಬಂದೆನ್ನನೊಂದೆ ಮಾತಿನಲಿ
'ತಿಂಗಳಾಯಿತೆ?' ಎಂದಳೆನ್ನ ಹೊಸಹುಡುಗಿ !
No comments:
Post a Comment
Note: Only a member of this blog may post a comment.